Menu

ಅರ್ಬುದ ರೋಗದಿಂದ ಯಜಮಾನನ ಕಳೆದುಕೊಂಡ ಕುಟುಂಬ ನಿರಾಶ್ರಿತ

  • Published in ಕೇರಳ
  • Read 55 times
  • Comments::DISQUS_COMMENTS
ಮಗನಿಗೂ ಎಂಡೋ ಬಾಧೆ : ಬಾಡೂರಿನಲ್ಲಿ ಬಡ ಸಂಸಾರ ಸಂಕಷ್ಟ

ಬದಿಯಡ್ಕ: ಜಿಲ್ಲೆಯ ಎಂಡೋಸಲ್ಪನ್ ಬಾಧಿತ ಪ್ರದೇಶವೆಂದು ಗುರುತಿಸಿಕೊಂಡಿರುವ ಪುತ್ತಿಗೆ ಗ್ರಾ.ಪಂಗೊಳಪಟ್ಟ ಬಾಡೂರು ಗ್ರಾಮದಲ್ಲಿ ಬಡ ಕುಟುಂಬವೊಂದರ ಯಜಮಾನನಿಗೆ ಅರ್ಬುದ ರೋಗ ಬಾಧಿಸಿ ಕಳೆದ 6 ತಿಂಗಳ ಹಿಂದೆ ಆಕಾಲಿಕವಾಗಿ ಸಾವನ್ನಪ್ಪಿದ್ದು ಇದೀಗ ಕುಟುಂಬದ ಒಡೆಯನಿಲ್ಲದೆ ಸಂಸಾರ ಆನಾಥವಾಗಿದೆ ಎನ್ನುವ ಸಮಸ್ಯೆಒಂದೆಡೆಯಾದರೆ ಇನ್ನು ಕುಟುಂಬ ಹೊಣೆಗಾರಿಕೆ ವಹಿಸಬೇಕಾದ ಇರುವ ಏಕೈಕ ಮಗನಿಗೂ ಎಂಡೋ ದುಷ್ಪರಿಣಾಮದಿಂದ ಮಲಗಿದಲ್ಲಿಯೇ ಇದ್ದು ಹೆತ್ತವರ ಆಶ್ರಯದಲ್ಲಿ ಕಾಲ ಕಳೆಯಬೇಕಾಗಿ ಬಂದಿರುವುದು ದುರಾದೃಷ್ಟವೇ ಸರಿ.ಈ ನಡುವೆ ಎರಡು ಹೆಣ್ಮಕ್ಕಳೊಂದಿಗೆ ಇರುವ ಇದ್ದೊಬ್ಬ ಕುಟುಂಬದ ನಿಶ್ಯಕ್ತ ಕುಡಿಯೊಂದಿಗೆ ವೃದ್ಧರಾದ ಎರಡು ಹೆಂಗಸರು ತಮ್ಮ ವೃದ್ಧಾಪ್ಯದಲ್ಲಿ ಸಂಕಷ್ಟದಲ್ಲಿ ಸಂಸಾರ ಸಾಗಿಸಬೇಕಾದ ಕರುಣಾಜನಕ ಕತೆಯೊಂದು ಇಲ್ಲಿದೆ.

ಸಂಕಷ್ಟ ಪರಿಸ್ಥಿತಿ: ಪುತ್ತಿಗೆ ಗ್ರಾ.ಪಂನ 4ನೇ ವಾರ್ಡಿನ ಬಾಡೂರು ಪಾಡಿ ಎಂಬಲ್ಲಿ ವಾಸಿಸುತ್ತಿದ್ದ ಕೂಲಿ ಕಾರ್ಮಿಕರಾಗಿದ್ದ ದಿ| ತಿಮ್ಮಪ್ಪ ಪೂಜಾರಿ ಎಂಬವರ ಪುತ್ರನಾದ ಸತೀಶ್‍ನಿಗೆ 16 ವರ್ಷ ಪ್ರಾಯ. ಆದರೆ ಹುಟ್ಟಿದಂದಿನಿಂದ ಚಾಪೆ ಬಿಟ್ಟೆಳಲು ಶಕ್ತನಲ್ಲದ ಈತನಿಗೆ ಚಿಕ್ಕಂದಿನಿಂದಲೇ ಹಲವಾರು ಔಷದೋಪಚಾರಗಳು ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ದೃಢೀಕರಿಸಿದ್ದು ಎಂಡೋಸಲನ್ ದುಷ್ಪರಿಣಾಮ ಎಂಬುದಾಗಿ ಆಗಿತ್ತು. ಈತನ ಕೈ ಕಾಲುಗಳಿಗೆ ಬಲವಿಲ್ಲದಿದ್ದು ಬುದ್ಧಿಯಲ್ಲೂ ಮಾಂದ್ಯತೆ ಇದೆ. ಪ್ರಾಯದಲ್ಲಿ ಹರೆಯಕ್ಕೆ ಬಂದಿದ್ದರೂ ಸತೀಶ್ ಇನ್ನೂ ತನ್ನ ಪ್ರಾಥಮಿಕ ಚಟುವಟಿಕೆ ನಡೆಸಲು ಶಕ್ತನಾಗಿಲ್ಲ. ಈ ಕುಟುಂಬಕ್ಕೆ ಈತನೊಬ್ಬನೆ ಗಂಡು ಮಗುವಾಗಿದ್ದು ಸಂಸಾರದ ಹೊಣೆ ನಿಭಾಯಿಸಬೇಕಾದ ಮಗನಿಗೇ ಈ ದುರ್ಗತಿ ಬಂದೊದಗಿರುವುದರಿಂದ ಇದೀಗ ವಿಧಿಯನ್ನು ಶಪಿಸುತ್ತಾ ನಿರ್ಗತಿಕರಾಗಿ ಬದುಕು ಸವೆಸಬೇಕಾದ ಸಂಕಷ್ಟ ಪರಿಸ್ಥಿತಿ ಇವರದ್ದಾಗಿದೆ.

ಬದುಕು ಕಸಿದುಕೊಂಡ ವಿಧಿ: ಕುಟುಂಬದ ಯಜಮಾನರಾಗಿದ್ದ ತಿಮ್ಮಪ್ಪ ಪೂಜಾರಿ ಅರ್ಬುದ ರೋಗಕ್ಕೆ ಬಲಿಯಾಗಿ ಕಳೆದ 1 ತಿಂಗಳ ಹಿಂದೆ ಸಾವನ್ನಪ್ಪಿದ್ದು ಎಂಡೋ ಪೀಡಿತ ಮಗ,ಇಬ್ಬರು ಹೆಣ್ಮಕ್ಕಳು ಹಾಗೂ ಪತ್ನಿ,ಅತ್ತೆಯನ್ನೊಳಗೊಂಡ ಇವರ ಕುಟುಂಬ ಇದೀಗ ಅನಾಥವಾಗಿದೆ. ಕೂಲಿ ಕಾರ್ಮಿಕರಾಗಿದ್ದ ತಿಮ್ಮಪ್ಪ ಪೂಜಾರಿಯವರುದುಡಿದ ಹಣದಿಂದ ಹೇಗೊ ಕುಟುಂಬವನ್ನು ನಿಭಾಯಿಸುತ್ತಿದ್ದು ಕಳೆದ 1 ವರ್ಷಗಳ ಹಿಂದೆ ಕುಟುಂಬಕ್ಕಾಗಿ ಬ್ಯಾಂಕ್ ಸಾಲ ಮಾಡಿ ಮನೆ ಕಟ್ಟಿದ್ದರು. ಈ ನಡುವೆ ಇವರಿಗೆ ರೋಗ ಬಾಧಿಸಿದ್ದು ಔಷದೋಪಚಾರಕ್ಕೆ ಸಾಕಷ್ಟು ಹಣ ವ್ಯಯಿಸಿದ್ದರು. ಕೊನೆಗೆ ಇಹಲೋಕ ತ್ಯಜಿಸಿದ್ದು ಇದೀಗ ಮಾಡಿದ ಸಾಲದ ಜತೆಗೆ ಮನೆ ಸಲಹುವ ಹೊಣೆಭಾರ ಈ ಮನೆಯ ಹೆಣ್ಮಕ್ಕಳ ಹೆಗಲಿಗೆ ಬಿದ್ದಿರುವುದು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ.

ದಾನಿಗಳ ಸಹಾಯ ಅಗತ್ಯ: ಯೌವನವಸ್ಥೆಯಲ್ಲಿಯೇ ಎಂಡೋ ದುಷ್ಪರಿಣಾಮದಿಂದ ಅತಂತ್ರಬದುಕು ಸಾಗಿಸುತ್ತಿರುವ ಸತೀಶ್‍ನ ಬಡಪಾಯಿ ಕುಟುಂಬ ತಂದೆ ಹಾಗೂ ಮಗನ ಚಿಕಿತ್ಸಾ ವೆಚ್ಚಕ್ಕೆ ಅತ್ಯ„ಕ ಹಣ ವ್ಯಯಿಸಿ ಕಂಗಲಾಗಿದೆ.ಅವಿವಾಹಿತನಾಗಿರುವ ಸತೀಶ್‍ನ ಇಬ್ಬರು ಸಹೋದರಿಯರು ಮಾತ್ರವಲ್ಲದೆ ವೃದ್ಧರಾದ ಮಾತೆಯಂದಿರು ಇವರೆಲ್ಲರ ಜತೆಗೆ ಅನ್ಯರನ್ನು ಆಶ್ರಯಿಸಿ ಬದುಕು ಸಾಗಿಸುವ ಸತೀಶನ ಸಂಕಷ್ಟ ದೇವರಿಗೇ ಪ್ರೀತಿ. ಈ ಬಡ ಕುಟುಂಬದ ಅಭಿವೃದ್ಧಿಗೆ ಸಹೃದಯಿಗಳ ಸಹಾಯ ಹಸ್ತ ಆನಿವಾರ್ಯ.
More in this category: « ಪೆರ್ಲ: ಹೈಮಾಸ್ಟ್ ವಿದ್ಯುತ್ ದೀಪ ಕಾರ್ಯಾರಂಭ ಅರ್ಬುದ ರೋಗದಿಂದ ಯಜಮಾನನ ಕಳೆದುಕೊಂಡ ಕುಟುಂಬ ನಿರಾಶ್ರಿತ »
back to top