ಸಾಹಿತ್ಯ – ಕಲೆ ಹೊರತಾದ ಜೀವನವಿಲ್ಲ : ಪ್ರಥ್ವಿರಾಜ್
- Published in ಉಡುಪಿ
- Read 39 times
- Comments::DISQUS_COMMENTS
ಕುಂದಾಪುರ : ಮನುಷ್ಯನ ವ್ಯಕ್ತಿತ್ವವನ್ನು ರೂಪಿಸುವ ಶಕ್ತಿ ಸಾಹಿತ್ಯಕ್ಕಿದೆ. ಕಲೆ ಮತ್ತು ಸಾಹಿತ್ಯ ಎಲ್ಲೆಡೆಯಲ್ಲಿಯೂ ಮಿಳಿತವಾಗಿರುತ್ತವೆ. ಅದನ್ನು ಗುರುತಿಸುವ ಕಣ್ಣು ನಮಗಿರಬೇಕು. ಇಲಿಯ ಬಿಲ, ಗೀಜಗನ ಗೂಡು ಎಲ್ಲದರಲ್ಲೂ ಕಲೆ ಇದೆ. ಎಲ್ಲ ಶಬ್ದ ಸಂಯೋಜನೆಯಲ್ಲಿಯೂ ಸಾಹಿತ್ಯ ಇದೆ. ಇವುಗಳಿಂದ ಹೊರತಾದ ಜೀವನವಿಲ್ಲ ಎಂದು ಸಾಹಿತಿ, ನ್ಯಾಯವಾದಿ ಅತ್ರಾಡಿ ಪ್ರಥ್ವಿರಾಜ್ ಹೆಗ್ಡೆ ಹೇಳಿದರು.
ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಪ್ಪಿನಕುದ್ರುವಿನ ಡಾ || ಸುಧಾಮೂರ್ತಿ ಮತ್ತು ಡಾ || ಪಿ. ದಯಾನಂದ ಪೈ ಪ್ರಾಯೋಜಿತ ಗೊಂಬೆಯಾಟ ಅಕಾಡೆಮಿ ಕಟ್ಟಡದ ಕೊಗ್ಗ ದೇವಣ್ಣ ಕಾಮತ್ ವೇದಿಕೆಯಲ್ಲಿ ನಡೆದ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಸಮಾರಮಭಧಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿರಿಯ ಗೊಂಬೆಯಾಟ ಕಲಾವಿದ ಯು. ವಾಮನ ಪೈ ಯವರನ್ನು ಕ.ಸಾ.ಪ. ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕೃತಜ್ಞತೆ ವ್ಯಕ್ತಪಡಿಸಿದ ವಾಮನ ಪೈ, ತಮ್ಮ ಕಲಾಜೀವನದ ಅನುಭವಗಳನ್ನು ಸ್ಮರಿಸಿಕೊಂಡರು.
ಕುಂದಾಪುರ ತಾಲೂಕು ಕ.ಸಾ.ಪ. ಅಧ್ಯಕ್ಷ ಕುಂದಾಪುರ ನಾರಾಯಣ ಖಾರ್ವಿ ಆಶಯ ಭಾಷಣ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸರ್ಕಾರ ಜಿಲ್ಲಾ ಕ.ಸಾ.ಪ. ಗೆ ಜಮೀನು ಮಂಜೂರು ಮಾಡಿದ್ದು, ಶೀಘ್ರದಲ್ಲೇ ಕಟ್ಟಡ ನಿರ್ಮಿಸಲಾಗುವುದು ಎಂದರು.
ಕ.ಸಾ.ಪ. ಕಾರ್ಯಕ್ರಮ ಸಂಯೋಜಕ ಯು. ವೆಂಕಟರಮಣ ಹೊಳ್ಳ ಸ್ವಾಗತಿಸಿದರು. ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾದ ಜಾನಪದ ಗೀತ ಗಾಯನ ಕಾರ್ಯಕ್ರಮದಲ್ಲಿ ಗೌರಿ ಕೆಲ್ಸಿಬೆಟ್ಟು, ಚಂದು ಕೆಲ್ಸಿಬೆಟ್ಟು, ಲಲಿತಾ ಶೇರುಗಾರ್ತಿ, ಸಂಜೀವಿ ಶೇರುಗಾರ್ತಿ ಮತ್ತು ಗೌರಿ ಶೇರುಗಾರ್ತಿ ಜನಪದ ಹಾಡುಗಳನ್ನು ಹಾಡಿ ರಂಜಿಸಿದರು.
ಯುವ ಕಥಾಗೋಷ್ಠಿಯಲ್ಲಿ ರಂಗ ಅಧ್ಯಾಪಕ ಮಣಿಕಂಠ, ತಾರಾನಾಥ ಮೇಸ್ತ, ಪೂರ್ಣಿಮಾ ಎನ್. ಭಟ್ ಮತ್ತು ಶಿಕ್ಷಕಿ ವಾಣಿಶ್ರೀ ಐತಾಳ ಸ್ವರಚಿತ ಕಥೆಗಳನ್ನು ಓದಿದರು.
ಕ.ಸಾ.ಪ. ಕಾರ್ಯದರ್ಶಿ ಕೆ.ಜಿ.ವೈದ್ಯ ಕಾರ್ಯಕ್ರಮ ನಿರೂಪಿಸಿ, ಸಂಯೋಜಕ ಯು. ವೆಂಕಟರಮಣ ಹೊಳ್ಳ ವಂದಿಸಿದರು.
Tweet